ಚಿಕ್ಕದೊಂದು ಕಾರಣ, ಅಪ್ಪ ಅಮ್ಮನೊಂದಿಗಿನ ಮುನಿಸು
ತೀರ ಬಾಲಿಶವಾಗಿ ಹಿಂದು ಮುಂದು ಯೋಚಿಸದೇ
ಆ ಹುಡುಗ ಸೀದ ನೇಣ ಕುಣಿಕೆಗೆ ಕೊರಳೊಡ್ಡಿದ್ದ
ಇದ್ದೊಬ್ಬ ಕುಡಿಯ ಸಾವಿನ ಹೊಡೆತ ತಾಳಲಾಗಲಿಲ್ಲ
ಮತ್ತೆ ಚಿಗುರುವ ಭರವಸೆ ಇರಲಿಲ್ಲ ಅವರಲ್ಲಿ
ಆ ಚಿತೆಯ ಬೆಂಕಿ ಅವರ ಬದುಕನ್ನು ಸುಡದಿರಲಿಲ್ಲ
ಮತ್ತೆ ಕೆಲವೇ ದಿನ, ಎಲ್ಲವನ್ನೂ ಬಿಟ್ಟು
ಮಗ ಕಾಲವಾದ ಮರದ ಇನ್ನೊಂದು ಬದಿಗೆ
ತಾವೂ ನೇತು ಬಿದ್ದರು ಹಗ್ಗದ ತುದಿಗೆ
ಇವರ ಬದುಕು ಬಾಳಲಾರಷ್ಟು ನಿಕೃಷ್ಟವಾಗಿತ್ತೆ?
ಮುಂಬಯಿಯ ರೈಲು ಸೇತುವೆಯೊಂದರಲ್ಲಿ
ಹಣ್ಣು ಹಣ್ಣು ಮುದುಕ, ಮುಗ್ಗಲು ಹಿಡಿದ ಬಟ್ಟೆಯೊಂದಿಗೆ
ಒಂದು ಕೈಯಲ್ಲಿ ಚಪ್ಪಲಿ ಇನ್ನೊಂದರಲ್ಲಿ ಭಿಕ್ಷೆ ಬಟ್ಟಲು
ತೆವಳುತ್ತಿದ್ದ ಜನರಿಂದ ಜನರೆಡೆಗೆ ಕೊಳೆತ ಕಾಲೆಳೆಯುತ್ತಾ
ಆದ್ರವಾಗಿ ಅನ್ನವನ್ನು ಬೇಡುತ್ತಾ, ಕರುಣೆಯ ಕೈಗಳಿಗಾಗಿ
ನೂಕ ನುಗ್ಗಲಿನಲ್ಲಿ ಯಾರೋ ಬೈಯ್ಯುತ್ತಿದ್ದರು ಆತನಿಗೆ
ಸಾಯಲು ಸಾಕಿತ್ತಲ್ಲವೇ ಈ ಸಂಪತ್ತು, ನೋವು ?